ಚರ್ಚಿಲ್, ಚಾರಲ್ಸ್ - 
1731-64. ಇಂಗ್ಲಿಷ್ ವಿಡಂಬನಕಾರ. ಆ ಕಾಲದಲ್ಲಿ ವಿಡಂಬನಕ್ಕೆ ಪ್ರಸಿದ್ಧನಾದ ಅಲೆಕ್ಸಾಂಡರ್ ಪೋಪನನ್ನು ಅನುಕರಿಸಿದ್ದಾನೆನ್ನಲಾಗಿದೆ. ತನ್ನ ಬದುಕಿನ ಕೊನೆಯ ನಾಲ್ಕು ವರ್ಷಗಳಲ್ಲಿ ಅತ್ಯಂತ ಪ್ರಭಾವಶಾಲಿ ವಿಡಂಬನಕವಿಯಾಗಿ ಪ್ರಸಿದ್ಧಿ ಪಡೆದ. ತನ್ನ ಸಹಪಾಠಿ ಹಾಗೂ ಹಿಂಬಾಲಕ ಹೊಗಳುಭಟ್ಟ ಕವಿ ರಾಬರ್ಟ್ ಲಾಯ್ಡ್‍ನ ಜೊತೆಯಲ್ಲಿ ಕುಡಿತ, ಹಾದರಗಳ ಸಡಿಲ ಜೀವನವನ್ನು ಸತತವಾಗಿ ನಡೆಸಿದ ಚರ್ಚಿಲ್‍ಗೆ ಯಾವ ಬಗೆಯ ನೈತಿಕ ನಿಯಮಗಳಲ್ಲೂ ನಂಬಿಕೆಯಿರಲಿಲ್ಲ. ವೃತ್ತಿಯಿಂದ ಈತ ಪಾದ್ರಿ. ಈತನ ಖುಷಿ ಜೀವನವನ್ನು ಕಂಡು ಜುಗುಪ್ಸೆಗೊಂಡ ಜನ ಇವನಿಗೆ ಬಹಿಷ್ಕಾರ ಹಾಕಲೂ ಸಿದ್ಧರಾಗಿದ್ದರು. ಲಾಯ್ಡ್‍ನ ಬಗ್ಗೆ ಮಾತ್ರ ಅತ್ಯಂತ ಪ್ರೀತಿನಿಷ್ಠೆಗಳನ್ನು ಕೊನೆಯವರೆಗೂ ತೋರಿದ ಚರ್ಚಿಲ್ ಆತ ಸತ್ತ ಕೆಲವೇ ದಿನಗಳ ಅನಂತರ ಮಿತಿ ಮೀರಿದ ಕುಡಿತದ ಅಮಲಿನಲ್ಲಿ ತೀರಿಕೊಂಡ.

ಚರ್ಚಿಲ್ ಕಟುವಾದ ಬರೆವಣಿಗೆ, ಹರಿತವಾದ ವಿಡಂಬಣೆ, ಇರಿಯುವ ಪದ ಪ್ರಯೋಗಗಳಿಗೆ ಹೆಸರಾಗಿದ್ದಾನೆ. ಸತ್ಯವನ್ನು, ನೀತಿಯನ್ನು ಹೇಳುವುದಕ್ಕಿಂತಲೂ ಮುಖ್ಯವಾಗಿ ಜನರನ್ನು ನೋಯಿಸುವಂಥ ಪ್ರಭಾವ ಬೀರುವ ಬರೆವಣಿಗೆಯೇ ಇವನ ಗುರಿಯಾಗಿತ್ತು. ಕೊಡತಿಯ ಪೆಟ್ಟಿನಂತೆ ವಿಡಂಬನದ ಏಟು ಬೀಳಬೇಕೇ ಹೊರತು ಅದರಲ್ಲಿ ನಯಗಾರಿಕೆ ಸಲ್ಲದೆಂದು ಇವನ ಅಭಿಪ್ರಾಯ. ಮೂರ್ಖರೇ ಕಾವ್ಯದ ವ್ಯಾಪ್ತಿಯನ್ನು ಸಾರಿದ ಚರ್ಚಿಲ್ 1761ರಲ್ಲಿ ದಿ ರೋಸಿಯಡ್ ಎಂಬ ವಿಡಂಬನಕಾವ್ಯ ಬರೆದು ತತ್‍ಕ್ಷಣ ಪ್ರಸಿದ್ಧಿ ಪಡೆದ. ಇದು ಅಲೆಕ್ಸಾಂಡರ್ ಪೋಪನ ಡನ್ಸಿಯಡ್‍ನ ಅನುಕರಣೆಯಾದರೂ ತನ್ನದೇ ಹರಿತ, ಚೂಪುಮಾತು, ಚುಚ್ಚುನುಡಿಗಳಿಂದ ತುಂಬಿ ಜನರಿಗೆ ತುಂಬ ಆನಂದ ಕೊಟ್ಟಿತು. ಇದು ಆ ಕಾಲದ ನಾಟಕಕಾರರು ಹಾಗೂ ನಟರ ಮೇಲಿನ ಅದ್ಭುತ ವಿಡಂಬನೆ. ಆದರೆ ಇದರಲ್ಲಿ ಬರುವ ಎಲ್ಲ ನಟರನ್ನೂ ಈಗ ನೆನಪಿಸಿಕೊಳ್ಳುವುದು ಅಸಾಧ್ಯ. ನಟ ನಟಿಯರ ಹಾವಭಾವಗಳು ವ್ಯಕ್ತಿತ್ವ, ರೀತಿ, ಕಲೆಯನ್ನು ಅವರು ಕೊಲೆಮಾಡುತ್ತಿದ್ದ ರೀತಿಗಳನ್ನು ವಿಡಂಬನೆಗೆ ಗುರಿಮಾಡಿದ ಈ ಕಾವ್ಯದಲ್ಲಿ ಚರ್ಚಿಲ್ ಪ್ರತಿಯೊಬ್ಬ ವ್ಯಕ್ತಿಯನ್ನೂ ಸ್ಪಷ್ಟವಾಗಿ ಅವನ ಓರೆಕೋರೆಗಳೊಂದಿಗೆ ಜೀವಂತವಾಗಿ ಚಿತ್ರಿಸಿದ್ದಾನೆ. ಆದರೆ ಇದರಲ್ಲಿ ತುಂಬಿರುವ ವ್ಯಕ್ತಿದ್ವೇಷ. ಎಲ್ಲರಮೇಲೂ ಕೃತಿಕಾರ ಕಾರಿರುವ ಕಹಿ ಸಮದರ್ಶಿ ಓದುಗರ ದೃಷ್ಟಿಯಲ್ಲಿ ಅತಿರೇಕವೆನಿಸುತ್ತದೆ. ವ್ಯಕ್ತಿಯ ಅವಹೇಳನವೇ ಉದ್ದೇಶವಾದ ರೋಸಿಯಡ್‍ನಲ್ಲಿ ಅಲ್ಲಲ್ಲಿ ಸುಂದರವಾದ ಸಾಲುಗಳೂ ಬರುತ್ತವೆ. ಉದಾಹರಣೆಗೆ ವಿಮರ್ಶಕರು

"ಒಡಪಾಯಿ ಬಂಟರು
ತಪ್ಪುಗಳ ಕಾಣದೆಯೆ ಗುಣವನೇ ಹೊಗಳುವರು
ಹಳಬರಿಗೆ ಸಲ್ಲಿಸುವ ಕುರುಡು ಕಾಣಿಕೆಯನ್ನು
ಗ್ರೀಸಿಗಪ್ಪಟಭಕ್ತಿ, ನಿಯಮಗಳಿಗಂಥ ಗುಲಾಮ"
ರಾಗಿದ್ದಾರೆಂದು ಹಳಿಯುತ್ತಾನೆ.

ಚರ್ಚಿನಲ್ಲನ ವ್ಯಕ್ತಿದ್ವೇಷದ ಈ ಕೃತಿಗೆ ಪ್ರತಿಯಾಗಿ ಅವನನ್ನು ಅವಹೇಳನಕ್ಕೆ ಗುರಿಮಾಡುವ ಒಂದು ಲೇಖನ ಪ್ರಕಟವಾಯಿತು. ದಿ ಕ್ರಿಟಿಕಲ್ ರೆವ್ಯೂ ಪತ್ರಿಕೆಯ ಈ ಲೇಖನಕ್ಕುತ್ತರವಾಗಿ ದಿ ಅಪಾಲಜಿ ಎಂಬ ಮತ್ತೊಂದು ವಿಡಂಬನಕಾವ್ಯವನ್ನು ಚರ್ಚಿಲ್ ರಚಿಸಿದ. ಇದು ದೊಡ್ಡ ನಟರನ್ನು ಕುರತುದೇ ಆದರೂ ಮೊದಲ ಕೃತಿಗಿಂತ ಇದರಲ್ಲಿ ವ್ಯಕ್ತಿನಿಂದೆ ಹಾಗೂ ಕಹಿ ಕಡಿಮೆಯಿದ್ದು ಉತ್ತಮ ವಿಡಂಬನೆಯೆನ್ನಿಸಿಕೊಂಡಿದೆ. ಹೊಗಳುಬಂಟನಾಗದ ಜಂಬ, ಸುಳ್ಳು ಹೇಳದ ಪ್ರಾಮಾಣಿಕತೆ, ಮೆಚ್ಚಿಸಲಾರದ ನೇರತನ ಹಾಗೂ ಹಿರಿಮೆ ಗಳಿಸಲಾಗದ ನಿಷ್ಠೆ-ಇವೇ ತನ್ನ ಗುಣಗಳೆಂದು ಕವಿ ಹೇಳಿಕೊಂಡಿದ್ದರೂ ಬದುಕಿನಲ್ಲಿ ಅವನ್ನು ತೋರಲಾಗದುದರಿಂದ ಇವನ ಬಗ್ಗೆ ಜನರಿಗೆ ಸದಭಿಪ್ರಾಯ ಮೂಡಿಬರಲಿಲ್ಲ.
(ಎಸ್.ಎ.ಎನ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ